ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿದ್ದ ‘ಕೋಟಿ ಕಂಠ ಗಾಯನ’ ಅದ್ಧೂರಿ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ನಾಡಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ನೆರೆದಿದ್ದ ಸಚಿವರು, ಸಂಸದರು, ಬಿಜೆಪಿ ನಾಯಕರು, ಇಲಾಖೆ ಅಧಿಕಾರಿಗಳು, ನಾಗರಿಕರು, ಸಾಹಿತಿಗಳು, ಗಾಯಕರು ಹಾಗೂ ವಿದ್ಯಾರ್ಥಿ ಸಮೂಹ ಸೇರಿ ಸುಮಾರು 50ಸಾವಿರಕ್ಕೂ ಅಧಿಕ ಮಂದಿ ‘ಜಯ ಭಾರತ ಜನನೀಯ ತನುಜಾತೆ’, ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಬಾರಿಸು ಕನ್ನಡ ಡಿಂಡಿಮವ’, ‘ಹೆಚ್ಚೇವು ಕನ್ನಡದ ದೀಪ’, ‘ವಿಶ್ವವಿನೂತನ ವಿದ್ಯಾಚೇತನ’ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಒಟ್ಟು ಆರು ಕನ್ನಡದ ಗೀತೆಗಳು ಸಾವಿರಾರು ಕನ್ನಡದ ಕಂಠಗಳಿಂದ ಏಕಕಾಲಕ್ಕೆ ಮೊಳಗಿದವು. ಇಡೀ ಕ್ರೀಡಾಂಗಣವೇ ಕನ್ನಡಮಯವಾಗಿತ್ತು. ಎಲ್ಲೆಲ್ಲಿಯೂ ಕನ್ನಡದ ಭಾವುಟಗಳು ರಾರಾಜಿಸುತ್ತಿದ್ದವು.ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಲಾವಿದರು, ಯುವ ಸಮೂಹ, ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವಲಯದ ಶ್ರಮಿಕರು, ನಾಯಕರು ಏಕಕಾಲಕ್ಕೆ ಆರು ಹಾಡುಗಳನ್ನು ಹಾಡುವ ಮೂಲಕ ನಾವೆಲ್ಲರು ಒಂದು ಎಂದು ತೋರಿಸಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.