ಬೆಂಗಳೂರಿನ ‘ಸಿಟಿಜನ್ಸ್ ಫಾರ್ ಡೆಮಾಕ್ರೆಸಿ’ ವತಿಯಿಂದ ನಗರದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಶಾಸಕರ ಅಮಾನತು ಒಂದು ಚರ್ಚೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಸದನದಲ್ಲಿ ಬಹಳ ಕಡಿಮೆ ಬಾರಿ ಅಮಾನತುಗಳಾಗಿವೆ. ಮೊನ್ನೆ ದುರ್ಬೀನು ಹಾಕಿಕೊಂಡು ಹುಡುಕಿದರೆ ಸಿಗುವಷ್ಟು ಚಿಕ್ಕ ವಿಷಯಕ್ಕೆ 10 ಬಿಜೆಪಿ ಶಾಸಕರ ಅಮಾನತು ಘಟನೆ ನಡೆದಿದೆ. ಇದು ಅಕ್ಷಮ್ಯ ಕ್ರಮ. ಊಟಕ್ಕೆ ವಿರಾಮ ಕೊಟ್ಟಿದ್ದರೆ ಘಟನೆಯೇ ನಡೆಯುತ್ತಿರಲಿಲ್ಲ. ಯೋಗೀಶ್ ಭಟ್ ಅವರು ಡೆಪ್ಯುಟಿ ಸ್ಪೀಕರ್ ಇದ್ದಾಗ ಪೇಪರ್ ವೆಯ್ಟನ್ನೇ ಅವರತ್ತ ಒಗೆದಿದ್ದರು. ಫೈಲುಗಳನ್ನೇ ಕಿತ್ತೆಸೆದಿದ್ದರು. ಆಗೆಲ್ಲ ಸಸ್ಪೆಂಡ್ ಮಾಡಿದ್ದರೇ? ಇದು ಕ್ಷಮಾರ್ಹವಲ್ಲ ಚಿಕ್ಕ ವಿಷಯವನ್ನೇ ದೊಡ್ಡ ವಿಷಯ ಮಾಡಿ ಸ್ಪೀಕರ್ ಮತ್ತು ಸರಕಾರ ಶಾಸಕರನ್ನು ಅಮಾನತು ಮಾಡಿದ್ದು ಅದು ಅಕ್ಷಮ್ಯ. ಇದರಲ್ಲಿ ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರ ಪ್ರಮುಖ ಪಾತ್ರವೂ ಇದೆ. ಕಾಂಗ್ರೆಸ್ ಪಕ್ಷ 50-60 ವರ್ಷ ಆಡಳಿತ ಮಾಡಿದೆ. ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ. ಇದು ವ್ಯವಸ್ಥೆಗೆ ಹೊಡೆತ ನೀಡುತ್ತದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.