ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ಮಂಗಳವಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಇತ್ತೀಚೆಗೆ ಹೊಸ ಪದವೊಂದು ಹುಟ್ಟಿಕೊಂಡಿದೆ. ಅದೇ ‘ಗ್ಯಾರಂಟಿ’ ಎಂಬ ಪದ. ‘ಬರೀ ಹಗರಣ ಮಾಡುವಲ್ಲಿ ಅನುಭವ ಹೊಂದಿರುವ ವಿಪಕ್ಷಗಳ ಹಗರಣ ಮಾಡುವವರ ‘ಗ್ಯಾರಂಟಿ’ ಭರವಸೆಗಳು ನಿಮಗೆ ಬೇಕಾ? ಅಥವಾ ಹಗರಣಕೋರರ ಮೇಲೆ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುವ ಬಿಜೆಪಿ ಬೇಕಾ? ನೀವೇ ನಿರ್ಣಯಿಸಿ’ ಎಂದು ಜನತೆಗೆ ಕರೆ ನೀಡಿದ್ದಾರೆ. ಮೊನ್ನೆ ಪಟನಾದಲ್ಲಿ ಸಭೆ ಮಾಡಿದವರ ಮುಖ ನೋಡಿದೆ. ಅವರೆಲ್ಲ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ಮಾಡಿದವರು. ಹಗರಣದಲ್ಲಿ ಕಾಂಗ್ರೆಸ್ಸೇ ಮುಂಚೂಣಿಯಲ್ಲಿದೆ’.ಹೀಗಾಗಿ ಮತ್ತೆ ಜನರು ವಿಪಕ್ಷಗಳ ಬೆನ್ನು ಹತ್ತಿ ಹೋದರೆ 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ‘ಗ್ಯಾರಂಟಿ’. ಆದರೆ ಬಿಜೆಪಿ ಮಾತ್ರ ಹಗರಣಕೋರರ ವಿರುದ್ಧ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುತ್ತದೆ. ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ಹಲವು ‘ಗ್ಯಾರಂಟಿ’ ಭರವಸೆಗಳನ್ನು ಇತ್ತೀಚೆಗೆ ನೀಡಿತ್ತು. ಅವುಗಳಲ್ಲಿ ರೈತರ ಸಾಲ ಮನ್ನಾ, ಮಹಿಳೆಯರಿಗೆ ಮಾಸಿಕ 1500 ರೂ. ಹಣ – ಮೊದಲಾದವು ಸೇರಿವೆ.ಅಲ್ಲದೆ, ಏಕರೂಪ ನಾಗರಿಕ ಸಂಹಿತೆ ಪರ ಬ್ಯಾಟಿಂಗ್ ಮಾಡಿದ ಮೋದಿ, ‘ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಕೋರ್ಟೇ ಒಲವು ತೋರಿದೆ. ಆದರೆ ಮತ ಬ್ಯಾಂಕ್ರಾಜಕೀಯದ ಕಾರಣ ವಿಪಕ್ಷಗಳು ಮುಸ್ಲಿಮರ ದಾರಿ ತಪ್ಪಿಸಿ ಪ್ರಚೋದಿಸುತ್ತಿವೆ. ನೀವೇ ಹೇಳಿ. ಕುಟುಂಬದಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಮತ್ತೊಂದು ಕಾನೂನು ಇರಬೇಕೆ? ಹಾಗಿದ್ದಾಗ ಆ ಮನೆ ನಡೆಯಲು ಸಾಧ್ಯವಿದೆಯೆ? ಇಂಥ ಎರಡೆರಡು ವ್ಯವಸ್ಥೆಗಳ ಮೂಲಕ ದೇಶ ನಡೆಯಲು ಸಾಧ್ಯವೇ?’ ಎಂದು ಪ್ರಶ್ನಿಸಿದರು ಹಾಗೂ ‘ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಲಾಗಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.