ಬಾಲಿವುಡ್ ಖ್ಯಾತ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಗಳು ನಾಗ್ ಪುರ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಪೊಲೀಸರು ಕೂಡಲೇ ಮುಂಬೈ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ನಾಗ್ಪುರ ಪೊಲೀಸರ ಮಾಹಿತಿಯನ್ನು ಆಧರಿಸಿ ಮುಂಬೈ ಪೊಲೀಸರು ಮೂವರು ಗಣ್ಯ ವ್ಯಕ್ತಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆಯೇ ಅಮಿತಾಭ್, ಧರ್ಮೇಂದ್ರ ಹಾಗೂ ಅಂಬಾನಿ ಮನೆಗೆ ಧಾವಿಸಿದ ಪೊಲೀಸ್ ತಂಡ, ಮನೆಯಲ್ಲಿ ಶೋಧ ಕಾರ್ಯ ನಡೆಸಿದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಹಾಗಾಗಿ ಇದೊಂದು ಹುಸಿಕರೆ ಎಂದು ಮಾಹಿತಿ ನೀಡಿದ್ದಾರೆ. ಗಣ್ಯರ ಮನೆಗೆ ಬಾಂಬ್ ಇಟ್ಟಿದ್ದೇವೆ ಎಂದು ಹುಸಿಕರೆ ಮಾಡಿದ ಘಟನೆ ಹೊಸದೇನೂ ಅಲ್ಲ. ಸಲ್ಮಾನ್ ಖಾನ್ ಸೇರಿದಂತೆ ಹಲವರಿಗೆ ಜೀವ ಬೆದರಿಕೆಯನ್ನೂ ಈ ಹಿಂದೆ ಹಾಕಲಾಗಿದೆ. ಅನೇಕ ಗಣ್ಯರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅನೇಕ ಬಾರಿ ಹುಸಿಕರೆಗಳು ಬಂದಿದ್ದೂ ಇದೆ. ಅದಕ್ಕೆ ಇದು ಹೊಸ ಸೇರ್ಪಡೆ ಅಷ್ಟೆ.ಈ ರೀತಿಯ ಕರೆ ಮಾಡಿದ ಕಿಡಿಗೇಡಿಗಳನ್ನು ಪೊಲೀಸರು ಬಲೆ ಬೀಸಿದ್ದಾರೆ. ಕೂಡಲೇ ಅವರನ್ನು ಪತ್ತೆ ಮಾಡಿ, ಬುದ್ದಿ ಕಲಿಸಲು ಮುಂದಾಗಿದ್ದಾರೆ.