ಪ್ರಶ್ನೋತ್ತರ ವೇಳೆ ಜೆಡಿಎಸ್ನ ಮರಿತಿಬ್ಬೇಗೌಡ ಅವರು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಬಿಡಿಎ 50 ನಿವೇಶನಗಳ ಪೈಕಿ 7 ಜನರಿಗೆ ಮಾತ್ರ ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳ ಹಂಚಿಕೆಯಾಗಿಲ್ಲ. ಬಡಾವಣೆ ರಚಿಸಿ ನಿವೇಶನಗಳ ಸಂಖ್ಯೆ ಗುರುತಿಸಿ ಸುಮಾರು 40 ವರ್ಷವಾದರೂ ನಿವೇಶನ ಹಂಚಿಕೆ ಮಾಡಿಲ್ಲ. ಆದರೆ ಬಿಡಿಎ ಅಧಿಕಾರಿಗಳು ಈ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಇಲ್ಲವೇ ಒಡಂಬಡಿಕೆ ಮಾಡಿಕೊಂಡಿದ್ದು, ಸುಮಾರು 500 ಕೋಟಿ ರು. ಅವ್ಯವಹಾರವಾಗಿದೆ. ಇಂತಹ ಬೆಲೆ ಬಾಳುವ ಭೂಮಿಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಸ್ವತ್ತುಗಳ ರಕ್ಷಣೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಏಕರೂಪತೆ ತರಲು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿದೆ. ನಿಯಮದ ಪ್ರಕಾರವೇ ಬಿಡಿಎ ಭೂಸ್ವಾಧೀನ ಪಡಿಸಿಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ಭೂಮಿಯನ್ನು ಕೈ ಬಿಡುವುದಿಲ್ಲ. ಆದರೂ ಭೂ ಮಾಲಿಕರು ತಮಗೆ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಇಲ್ಲವೇ ಬೇರೆ ಬೇರೆ ಕಾರಣ ಮುಂದಿಟ್ಟುಕೊಂಡು ನ್ಯಾಯಾಲಯದ ಮೊರೆ ಹೋಗುತ್ತಾರೆ. ಕೆಲವು ಸಾರಿ ಒಂದೇ ರೀತಿಯ ಪ್ರಕರಣಗಳಿಗೆ ಬೇರೆ ಬೇರೆ ರೀತಿಯ ತೀರ್ಪು ಸಹ ಬಂದಿರುತ್ತದೆ. ಕೆಲವು ಸಾರಿ ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ