ಮತದಾನ ನಡೆದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ಹಾರಿದರು. ವಿದೇಶದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಅಲ್ಲಿಂದಲೇ ರಾಜಕೀಯ ಲೆಕ್ಕಾಚಾರ ಶುರು ಮಾಡಿದ್ದಾರೆ. ಯಾರೊಂದಿಗಾದರೂ ಓಕೆ, ನಾವು ಮೈತ್ರಿಗೆ ಸಿದ್ಧ. ಆದರೆ ಕೆಲವು ಷರತ್ತುಗಳು ಇವೆ ಎಂದು ಆಪ್ತರ ಮೂಲಕ ಹೆಚ್ಡಿಕೆ ಖಡಕ್ಸಂದೇಶ ಕೊಟ್ಟಿದ್ದಾರೆ. ಯಾರೇ ಮೈತ್ರಿಗೆ ಬಂದರೂ, ನಮ್ಮ ಬೇಡಿಕೆ, ನಮ್ಮ ಷರತ್ತು ಒಪ್ಪಿದವರ ಜೊತೆ ಸರ್ಕಾರ ನಡೆಸುತ್ತೇವೆ. ಎರಡು ಬಾರಿಯಾದ ಅವಾಂತರ ಈ ಬಾರಿ ಆಗಬಾರದು. ದೋಸ್ತಿ ಮಾಡಿಕೊಳ್ಳುವ ಮುನ್ನವೇ ಷರತ್ತುಗಳಿಗೆ ಒಪ್ಪಿಕೊಂಡರೆ ನಾವು ಸಿದ್ಧ.ಸಿಎಂ ಜೊತೆಗೆ ಪ್ರಮುಖ ಖಾತೆಗಳು ನಮಗೆ ನೀಡಬೇಕು. ಜಲಸಂಪನ್ಮೂಲ ಇಲಾಖೆ, ಇಂಧನ, ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರಮುಖ ಖಾತೆಗಳು ಕೊಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಹೈಕಮಾಂಡ್ಗಳು ಹಸ್ತಕ್ಷೇಪ ಮಾಡಬಾರದು. ದೋಸ್ತಿ ಸರ್ಕಾರದ ಮಧ್ಯೆ ಯಾವುದೇ ಸಮನ್ವಯ ಸಮಿತಿ ಇರಬಾರದು. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಯಾವುದೇ ನಿರ್ಬಂಧ ಹಾಕಬಾರದು. ಸರ್ಕಾರದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನನಗೆ ಸ್ವತಂತ್ರ ಕೊಡಬೇಕು. ಜೆಡಿಎಸ್ ಕೊಟ್ಟಿರುವ ಪ್ರಣಾಳಿಕೆಗೆ ಯಾವುದೇ ವಿರೋಧ ಮಾಡದೇ ಜಾರಿಗೆ ಒಪ್ಪಿಕೊಳ್ಳಬೇಕು. ಜೆಡಿಎಸ್ ಭದ್ರಕೋಟೆ ಹಳೆಮೈಸೂರು ಭಾಗದ ಜಿಲ್ಲೆಗಳ ಮೇಲೆ ಮೈತ್ರಿ ಪಕ್ಷ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಮೈತ್ರಿ ಬಯಸಿ ಬರುವ ಪಕ್ಷಕ್ಕೆ ಕುಮಾರಸ್ವಾಮಿ ಷರತ್ತು ಹಾಕಿದ್ದಾರೆ.