ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ವಿರುದ್ದ ದಂಗೆ ಎದ್ದವರಿಗೆ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ರಾಜ್ಯದ ಜನತೆಗೆ ಮಾಡುವ ದ್ರೋಹವಾಗಿದೆ. ಅಲ್ಲದೇ ದಲಿತ ಶಾಸಕನ ಮನೆ ಸುಟ್ಟವರ ರಕ್ಷಣೆ ಮಾಡುವುದು ಕಾಂಗ್ರೆಸ್ ನ ದಲಿತ ವಿರೋಧಿ ನೀತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಗೃಹ ಸಚಿವರಿಗೆ ಪತ್ರ ಬರೆದು ಆರೋಪಿಗಳ ವಿರುದ್ದದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಬಹಳ ಗಂಭೀರವಾಗಿದೆ. ಈ ಪ್ರಕರಣದಲ್ಲಿ ಪೊಲೀಸ್ ಠಾಣೆ, ಪೊಲಿಸ್ ವಾಹನಗಳು ಕಾಂಗ್ರೆಸ್ ಶಾಸಕನ ಮನೆ ಸುಟ್ಟಿದ್ದಾರೆ.
ಇದು ರಾಜ್ಯ ಸರ್ಕಾರದ ವಿರುದ್ದದ ದಂಗೆಯಾಗಿದೆ. ರಾಜ್ಯದ ಮೇಲೆ ದಂಗೆ ಎದ್ದರೂ ಕೂಡ ಅವರ ವಿರುದ್ದದ ಪ್ರಕರಣ ಗಳನ್ನು ವಾಪಸ್ ಪಡೆಯಲು ತೀರ್ಮಾನ ಮಾಡಿದ್ದಾರೆ ಎಂದರೆ ರಾಜ್ಯದ ವಿರುದ್ಧ ಏನೇ ಮಾಡಿದರೂ ರಕ್ಷಣೆ ದೊರೆಯುತ್ತದೆ ಎನ್ನುವುದು ಅಪರಾಧಿಗಳಿಗೆ ಧೈರ್ಯ ಬರುತ್ತದೆ. ದಂಗೆ ಎದ್ದವರಿಗೂ ಕೂಡ ಆಶ್ರಯ ಕೊಡುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.ಎನ್ ಐಎ ತನಿಖೆ ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನು ಎನ್ ಐ ಎ ತೆಗೆದುಕೊಂಡಿದೆ. ಇದರಲ್ಲಿ ಪಿಎಫ್ ಐ, ಎಸ್ ಡಿಪಿಐ ಕೈವಾಡ ಇದೆ ಅಂತ ಬಹಳ ಸ್ಪಷ್ಟವಾದ ಪುರಾವೆಗಳಿವೆ. ತನಿಖೆ ನಡಿಸಿ ಚಾರ್ಜ್ ಸೀಟ್ ಆಗಿದೆ. ಎನ್ ಐಎ ತನಿಖೆ ನಡೆಸುತ್ತಿರುವ ಪ್ರಕರಣವನ್ನು ಇವರು ಹೇಗೆ ವಾಪಸ್ ಪಡೆಯುತ್ತಾರೆ. ನಾವು ಅಧಿಕಾರದಲ್ಲಿ ಇದ್ದಾಗಲೂ ಈ ಪ್ರಕರಣಗಳನ್ನು ವಾಪಸ್ ಪಡೆಯುವಂತೆಒತ್ತಡ ಇತ್ತು. ನಾವು ಸಾಕ್ಷಿ ಸಮೇತ ಹಿಡಿದುಕೊಂಡು ಅವರನ್ನು ಆರೆಸ್ಟ್ ಮಾಡಿದ್ದೇವು. ಈ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ಈ ತರಹ ದಂಗೆಎದ್ದು ಪೊಲಿಸ್ ಠಾಣೆ ಸುಟ್ಟವರ ವಿರುದ್ದದ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿರುವ ಜನರಿಂದ ಆಯ್ಕೆಯಾದ ಈ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ. ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಪ್ರಕರಣಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆಸಿದ್ದಾರೆ. ನಾವು ಇದನ್ನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ. ಇದರ ವಿರುದ್ದ ಕಾನೂನಾತ್ಮಕ ಹಾಗೂ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.