ಸಿಎಂ ಕಚೇರಿ ಲಂಚದ ಆರೋಪ, ವೈಎಸ್ಟಿ ಟ್ಯಾಕ್ಸ್ ಆರೋಪ, ಲಂಚದ ಆಡಿಯೋ ಪೆನ್ ಡ್ರೈವ್ ಪ್ರದರ್ಶನ ಸೇರಿ ಹೆಚ್ಡಿಕೆ ದಿನಕ್ಕೊಂದು ಪೊಲಿಟಿಕಲ್ ಬಾಂಬ್ ಹಾಕುತ್ತಿದ್ದಾರೆ. ಸಹಜವಾಗಿಯೇ ಹೆಚ್ಡಿಕೆ ಆರೋಪ ಸರ್ಕಾರ ಮಟ್ಟದಲ್ಲೂ ಬಿಸಿಬಿಸಿ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಇವತ್ತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಸೋಲಿನ ಹತಾಶೆ, ದ್ವೇಷದಿಂದ ಆರೋಪ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಇದನ್ನೇ ಮಾಡಿದ್ರಾ ಅಂತಾ ಕೇಳಬಹುದಾ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಹೇಳಿಕೆಗೆ ಹೆಚ್ಡಿಕೆ ಇನ್ನಷ್ಟು ಕೆಂಡಕಾರಿದ್ದಾರೆ. ಅವರು ಮನೆಯಲ್ಲೇ ಮಲಗಿದ್ರೆ ಹೀಗೆ. ಹೊರಗೆ ಓಡಾಡಿದ್ರೆ ಇನ್ನೆಷ್ಟಿರಬೇಡ ಅಂತಾ ಟಾಂಗ್ ಕೊಟ್ಟಿದ್ದಾರೆ. ನನ್ನ ಬಳಿ ಇರುವ ಪೆನ್ ಡ್ರೈವ್ ಖಾಲಿ ಅಲ್ಲ, ಓರಿಜಿನಲ್. ಬಿಡುಗಡೆ ಮಾಡಿಯೇ ಮಾಡುತ್ತೇನೆ. ಸ್ವಲ್ಪ ದಿನ ಕಾಯಬೇಕು ಅಂತಾ ಕುತೂಹಲ ಹುಟ್ಟುಹಾಕಿದ್ದಾರೆ. ಈ ಗಲಾಟೆ ನಡುವೆ ಬಿಜೆಪಿ ಯತೀಂದ್ರ ಸಿದ್ದರಾಮಯ್ಯಗೆ ಶ್ಯಾಡೋ ಸಿಎಂ ಪಟ್ಟ ಕಟ್ಟಿದೆ. ಹಾಗಾದ್ರೆ `ಛಾಯಾ’ಚಿತ್ರಕಥೆ ರಾಜಕೀಯದ ಅಸಲಿಯತ್ತು ಏನು? ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.